ಅಪ್ರಾಪ್ತ ಸಂತ್ರಸ್ತ ಮಗುವಿನ ಗುರುತು ಬಹಿರಂಗ: ಪತ್ರಕರ್ತ, ಸಂಪಾದಕರ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್!
ಬೆಂಗಳೂರು: ಅಪ್ರಾಪ್ತ ಸಂತ್ರಸ್ತ ಮಗುವಿನ ಗುರುತನ್ನು ಪತ್ರಿಕೆಯಲ್ಲಿ ಬಹಿರಂಗಪಡಿಸಿದ ಆರೋಪ ಎದುರಿಸುತ್ತಿದ್ದ ಪತ್ರಕರ್ತ ಮತ್ತು ಪತ್ರಿಕೆಯ ಸಂಪಾದಕರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015ರ ಸೆಕ್ಷನ್ 74(1)ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್ನ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕಸದಸ್ಯ ಪೀಠವು ಈ ಪ್ರಮುಖ ಆದೇಶವನ್ನು ಹೊರಡಿಸಿದೆ.
ಕಾನೂನಿನ ಸಂಘರ್ಷಕ್ಕೆ ಒಳಗಾದ ಮಗು, ಸಂತ್ರಸ್ತ ಮಗು ಅಥವಾ ಸಾಕ್ಷಿ ಮಗುವಾಗಿದ್ದರೂ ಸಹ, ಯಾವುದೇ ಕಾರಣಕ್ಕೂ ಮಗುವಿನ ಹೆಸರು ಅಥವಾ ಶಾಲೆಯ ವಿವರಗಳನ್ನು ಪ್ರಕಟಿಸುವುದನ್ನು ಕಾಯ್ದೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
- ಘಟನೆ: ೨೦೨೦ರ ಜನವರಿಯಲ್ಲಿ ದಾಂಡೇಲಿಯ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಹೂಡಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ದಿನಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು.
- ಆರೋಪ: ಈ ಸುದ್ದಿಯಲ್ಲಿ ಸಂತ್ರಸ್ತ ಮಗುವಿನ ಗುರುತು ಬಹಿರಂಗಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವರದಿಗಾರ ಮತ್ತು ಸಂಪಾದಕರ ವಿರುದ್ಧ ಎಫ್ಐಆರ್ ದಾಖಲಾಗಿ, ತನಿಖೆ ಪೂರ್ಣಗೊಂಡಿತ್ತು.
- ನ್ಯಾಯಾಲಯಕ್ಕೆ ಅರ್ಜಿ: ದಾಂಡೇಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಇರುವ ಈ ಕಾನೂನು ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ಮಾಧ್ಯಮ ಸಿಬ್ಬಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು.
’ಮಗುವಿಗೆ ನ್ಯಾಯ ಕೊಡಿಸಲು ಸುದ್ದಿ ಪ್ರಕಟಿಸಿದ್ದೆವು’ – ಪತ್ರಿಕೆಯ ವಾದ
ನ್ಯಾಯಾಲಯದಲ್ಲಿ ಅರ್ಜಿದಾರರು ವಾದ ಮಂಡಿಸಿ, “ನಾವು ಮಗುವಿನ ಮಾನಹಾನಿ ಮಾಡುವ ಉದ್ದೇಶದಿಂದ ಈ ವರದಿ ಪ್ರಕಟಿಸಿಲ್ಲ. ಬದಲಿಗೆ ಮಗುವಿಗೆ ನ್ಯಾಯ ಕೊಡಿಸುವ ಒಳ್ಳೆಯ ಉದ್ದೇಶದಿಂದ ಮಾತ್ರ ಸುದ್ದಿ ಪ್ರಕಟಿಸಿದ್ದೇವೆ” ಎಂದು ಸಮರ್ಥಿಸಿಕೊಂಡಿದ್ದರು.
ಪತ್ರಿಕೆಯ ವಾದ ತಿರಸ್ಕರಿಸಿದ ಹೈಕೋರ್ಟ್!
ಪತ್ರಿಕಾ ಸಿಬ್ಬಂದಿಯ ವಾದವನ್ನು ಸಾರಾಸಾಸಗಟಾಗಿ ತಿರಸ್ಕರಿಸಿದ ಹೈಕೋರ್ಟ್, ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ:
- ಉದ್ದೇಶ ಏನೇ ಇರಲಿ, ನಿಷೇಧ ಕಡ್ಡಾಯ: ಬಾಲ ನ್ಯಾಯ ಕಾಯ್ದೆ ೨೦೧೫ರ ಉದ್ದೇಶ ಮತ್ತು ಶಾಸಕಾಂಗದ ಆಶಯವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, “ಮಗುವಿನ ಹಿತದೃಷ್ಟಿಯಿಂದ ಸುದ್ದಿ ಪ್ರಕಟಿಸಿದ್ದೇವೆ” ಎಂಬ ಸಮರ್ಥನೆಯನ್ನು ಪ್ರತಿಪಾದಿಸಲು ಸಾಧ್ಯವಿಲ್ಲ.
- ಮಾನಸಿಕ ಪರಿಣಾಮ: ಮಕ್ಕಳು ಅತ್ಯಂತ ಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ. ಅವರು ಸಂತ್ರಸ್ತರಾಗಿದ್ದರೂ ಸಹ ಅವರ ಹೆಸರು ಮತ್ತು ಘಟನೆಯನ್ನು ಮಾಧ್ಯಮಗಳಲ್ಲಿ ವಿಪರೀತ ಪ್ರಚಾರ ಮಾಡುವುದು ಅವರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಪ್ರಚಾರಕ್ಕೆ ಮಗು ಸ್ಪಂದಿಸುವ ರೀತಿ ಅದರ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
- ಮಕ್ಕಳ ಸ್ನೇಹಿ ವಿಧಾನ: ಈ ಕಾಯ್ದೆಯು ಸಂತ್ರಸ್ತ ಅಥವಾ ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಸೂಕ್ತ ಆರೈಕೆ, ರಕ್ಷಣೆ ಮತ್ತು ಸಾಮಾಜಿಕ ಮರುಸೇರ್ಪಡೆ ಒದಗಿಸುವ ಉದ್ದೇಶವನ್ನು ಹೊಂದಿದೆ.
- ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ ೭೪(೧)ರ ಪ್ರಕಾರ, ಯಾವುದೇ ಪತ್ರಿಕೆ, ನಿಯತಕಾಲಿಕೆ, ಆಡಿಯೋ-ವಿಶುವಲ್ ಮಾಧ್ಯಮ ಅಥವಾ ಇತರ ಸಂವಹನ ಮಾಧ್ಯಮಗಳಲ್ಲಿ ಸಂತ್ರಸ್ತ, ಸಾಕ್ಷಿ ಅಥವಾ ಕಾನೂನಿನ ಸಂಘರ್ಷದಲ್ಲಿರುವ ಮಗುವಿನ ಹೆಸರು, ವಿಳಾಸ, ಶಾಲೆ ಅಥವಾ ಮಗುವಿನ ಗುರುತನ್ನು ಬಹಿರಂಗಪಡಿಸುವ ಯಾವುದೇ ವಿವರಗಳನ್ನು ಅಥವಾ ಫೋಟೋವನ್ನು ಪ್ರಕಟಿಸುವಂತಿಲ್ಲ.
- ಶಿಕ್ಷೆಯ ಪ್ರಮಾಣ: ಈ ನಿಯಮವನ್ನು ಉಲ್ಲಂಘಿಸಿದರೆ ೬ ತಿಂಗಳವರೆಗೆ ಜೈಲು ಶಿಕ್ಷೆ, ೨ ಲಕ್ಷ ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
