ಪೊಲೀಸರಿಗೆ ಸಿಕ್ಕಿಬಿದ್ದ ಲಾವಣ್ಯ ಹಂತಕ ಹೇಳಿದ್ದೇನು?
ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬಂಟ್ವಾಳದ ಲಾವಣ್ಯ ಬರ್ಬರ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರ ಬಳಿ ಚೇತನ್ ಹೇಳಿದ್ದು ಒಂದೇ ಒಂದು ಮಾತು.

ಕಾರಿನಲ್ಲಿ ಸಿಕ್ಕಿಬಿದ್ದ ಲಾವಣ್ಯಳನ್ನ ಕೊಂದ ಹಂತಕ: ಘಟನೆ ನಡೆದ 24 ಗಂಟೆಯೊಳಗೆ ಪೊಲೀಸರು ಆರೋಪಿ ಚೇತನನ್ನು ಮಂಗಳೂರು ಬಳಿಯ ವಾಮಂಜೂರು ಪಚ್ಚನಾಡಿಯಲ್ಲಿ ಬಂಧಿಸಿದ್ದಾರೆ. ಮಂಗಳೂರಿನ ಪಚ್ಚನಾಡಿ ಎಂಬಲ್ಲಿ ಕಾರ್ ನಲ್ಲಿ ಕೂತಿದ್ದ ಚೇತನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಕ್ಕಿಬೀಳ್ತಿದ್ದಂತೆ ಖಾಕಿ ಮುಂದೆ ಹೇಳಿದ್ದೇನು?: ಪೊಲೀಸರು ಹಂತಕ ಚೇತನ್ನನ್ನು ಬಂಧಿಸಿದ್ದು, ಕರೆದುಕೊಂಡು ಬರ್ತಿದ್ದ ವೇಳೆ ತಾನು ಆತ ಇಲಿ ಪಾಷಣ ತಿಂದಿರೋದಾಗಿ ಚೇತನ್ ಪೊಲೀಸರಿಗೆ ಹೇಳಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನು ಮಗಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಯನ್ನು ಬಂಧಿಸುವ ಬದಲು ಎನ್ಕೌಂಟರ್ ಮಾಡಿ ಎಂದು ಯುವತಿಯ ತಂದೆ ಬಾಲಕೃಷ್ಣ ಗೌಡ ಆಕ್ರೋಶ ಹೊರಹಾಕಿದ್ದಾರೆ. ನಮಗೆ ಆತನ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆತ ನಮ್ಮ ಮನೆಗೂ ಬಂದಿಲ್ಲ. ನಮ್ಮ ದೂರದ ಸಂಬಂಧಿ ಮಾತ್ರ ಆಗಿದ್ದ ಎಂದಿದ್ದಾರೆ.
ಬರ್ಬರವಾಗಿ ಕೊಂದ ಚೇತನ್: 25 ವರ್ಷದ ಬಂಟ್ವಾಳದ ಕಕ್ಯಪದವು ನಿವಾಸಿ ಲಾವಣ್ಯ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದಳು. ನಿನ್ನೆ ಎಂದಿನಂತೆ ಸಾಯಂಕಾಲ ಕೆಲಸ ಮುಗಿಸಿ ಮನೆಗೆ ಹಿಂತಿರುಗಲು ಏಕಾಏಕಿ ಆರೋಪಿ ಚೇತನ್ ಬಸ್ಸಿನ ಒಳಗಡೆ ಬಂದು ಹೊರಗಡೆ ಎಳೆದೊಯ್ದು ಮಚ್ಚಿನಿಂದ ದಾಳಿ ನಡೆಸಿದ್ದ.
ನಾಲ್ಕು ವರ್ಷಗಳ ಹಿಂದೆ ಬ್ರೇಕಪ್: ನಾಲ್ಕು ವರ್ಷಗಳ ಹಿಂದೆ ಲಾವಣ್ಯ ಮತ್ತು ಚೇತನ್ ನಡುವೆ ಪ್ರೇಮ ಸಂಬಂಧವಿದ್ದಿತ್ತು ಎನ್ನಲಾಗಿದೆ. ಆದರೆ ಯಾವುದೋ ಕಾರಣಕ್ಕೆ ಅವರ ನಡುವೆ ಬ್ರೇಕಪ್ ಆಗಿತ್ತು. ಆದರೂ ಚೇತನ್ ಲಾವಣ್ಯಳನ್ನು ಬಿಡದೆ ತೊಂದರೆ ನೀಡುತ್ತಿದ್ದ. ಪ್ರೀತಿ ಮಾಡಲು ಒತ್ತಾಯ ಮಾಡುತ್ತಿದ್ದ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
